Tuesday, December 2, 2008

ಮತಾಂತರ- ಒಂದು ಚರ್ಚೆ' ಟಿಪ್ಪಣಿಗೆ ಡಾ. ಬಿ.ಎಂ.ಪುಟ್ಟಯ್ಯನವರ ಪ್ರತಿಕ್ರಿಯ

ಡಾ. ಕೆ.ವಿ.ಎನ್. ರವರ `ಮತಾಂತರ- ಒಂದು ಚರ್ಚೆ' ಟಿಪ್ಪಣಿಗೆ ಡಾ. ಬಿ.ಎಂ.ಪುಟ್ಟಯ್ಯನವರ ಪ್ರತಿಕ್ರಿಯೆ ಇಲ್ಲಿದೆ. ಇದೂ ಸಹ ಚರ್ಚೆಗೆ ಸಿದ್ಧವಾಗಲು ಅನುಕೂಲವಾಗುತ್ತದೆ.


ಮತಾಂತರ: ಚರ್ಚೆಗೆ ಒಂದು ಪ್ರವೇಶ (ಕರಡು ಪ್ರತಿ)
ಡಾ. ಬಿ. ಎಂ. ಪುಟ್ಟಯ್ಯ
(ಒಂದು ಕಡೆ `ಮತಾಂತರ’ವೂ ಮತ್ತೊಂದು ಕಡೆ ಅದನ್ನು ಕುರಿತು ಚರ್ಚೆಯೂ ನಡೆಯುತ್ತಿದೆ. ಇದನ್ನು ನೋಡುವ ವಿಧಾನ ಹಾಗೂ ದೃಷ್ಟಿಕೋನದ ಬಗೆಗೆ ಒಂದು ಟಿಪ್ಪಣಿ)

೧. `ಮತಾಂತರ’ ಆಗುತ್ತಿರುವವರ ಚಲನಶೀಲ ವಸ್ತುಸ್ಥಿತಿಯ ಬಗ್ಗೆ ಇನ್ನೂ ಹೆಚ್ಚಿನ ಅರಿವು ಅಗತ್ಯವಿದೆ. `ಮತಾಂತರ’ ಆಗುತ್ತಿರುವವರು ಸಮಾಜದ ಅಂಚಿನವರು ಮತ್ತು ಅಸ್ಪೃಶ್ಯರು. ಯಾರ ಲಾಭಕ್ಕಾಗಿ ಅವರ ವಸ್ತುಸ್ಥಿತಿಯನ್ನು ಇನ್ನೂ ಹಾಗೇ ಇಡಲಾಗಿದೆ ಎಂಬ ಪ್ರಶ್ನೆ ಬಹಳ ಮುಖ್ಯ.

೨. `ಮತಾಂತರ’ ಆಗುತ್ತಿರುವವರನ್ನು, ಹಸಿವು ಮತ್ತು ಅಪಮಾನಗಳ, ಅಸಹಾಯಕತೆ ಹಾಗೂ ಪ್ರತಿರೋಧಗಳ ವಸ್ತುಸ್ಥಿತಿ ಎಂದು ಕರೆಯಬಹುದು. ಬಲಾತ್ಕಾರದ ಶೋಷಣೆಯಿಂದ ನಿರ್ಮಿಸಿರುವ ಹಸಿವು ಮತ್ತು ಸುತ್ತುವರೆದ ಅಪಮಾನಗಳು ಯಾವುದೇ ಸಮಾಜ ಜೀವಿಯ ಕನಿಷ್ಠ ವ್ಯಕ್ತಿತ್ವವನ್ನು ಕೊಂದು ಅಸಹಾಯಕತೆಗೆ ಎಸೆಯುತ್ತವೆ. ಇದು ಕೇವಲ ಘಟನೆಯ ರೀತಿಯದಲ್ಲ. ಇದೊಂದು ನಿರಂತರ ಪ್ರಕ್ರಿಯೆ. ಇದು ಅಸಹಾಯಕತೆಯನ್ನು ಮಾತ್ರವಲ್ಲದೆ ಅದರೊಳಗಿನಿಂದಲೇ ಪ್ರತಿರೋಧವನ್ನೂ ಹುಟ್ಟಿಸುತ್ತದೆ. ಪ್ರತಿರೋಧವು ರಾಜಕೀಯವಾಗಿ ಬಲಶಾಲಿಯಾಗಿದ್ದಾಗ ಇವರಿಗೆ ಶಕ್ತಿಯಾಗಿಯೂ, ದುರ್ಬಲವಾಗಿದ್ದಾಗ ಶಾಪವಾಗಿಯೂ ಪರಿಣಮಿಸುತ್ತದೆ.

೩. ಇವರಿಗೆ (ದಲಿತ, ಕೆಳಮಧ್ಯಮ ವರ್ಗ, ಅನಕ್ಷರಸ್ಥರು ಮತ್ತು ಸಾಮಾಜಿಕ ನ್ಯಾಯದ ತೀವ್ರ ಸೆಳೆತಕ್ಕೆ ಒಳಗಾದವರು) ತಮ್ಮ ಸ್ಥಿತಿಯ ಬಗ್ಗೆ ಒಂದು ಬಗೆಯ ಅರಿವು ಬಂದಾಗ, ಅದು ಪ್ರತಿರೋಧ ಮತ್ತು ಸ್ವಾಭಿಮಾನಗಳನ್ನು ಹುಟ್ಟಿಸುತ್ತದೆ. ಇವು ಬೇರೆಬೇರೆ ಸ್ವರೂಪದಲ್ಲಿ ಕೆಲಸ ಮಾಡಬಹುದು.
ಅಸಮಾನತೆಯ ಲಾಭ ಪಡೆಯುವವರಿಗೆ ಇವರ ಪ್ರತಿರೋಧ ಮತ್ತು ಸ್ವಾಭಿಮಾನ ಬೇಕಾಗಿರುವುದಿಲ್ಲ. ಹಾಗಾಗಿ ಇವನ್ನು ಸಮಾಜವಿರೋಧಿ ಎಂದು ಗುರುತಿಸಲಾಗುತ್ತದೆ. ಆ ನೆಪದಲ್ಲಿ ಇವರನ್ನು ಮತ್ತೊಮ್ಮೆ ಹತ್ತಿಕ್ಕುವ, ಅವಹೇಳನ ಮಾಡುವ ಕ್ರಿಯೆ ಶುರುವಾಗುತ್ತದೆ. ಇವರು ಯಾವುದನ್ನು (ಪ್ರಜ್ಞೆ, ಅರಿವು ಇತ್ಯಾದಿ) ಬಿಡುಗಡೆ ಎಂದು ತಿಳಿದಿದ್ದರೋ ಅದುವೇ ಅವರ ಹೊಸಬಗೆಯ ಹತ್ತಿಕ್ಕುವಿಕೆಗೆ/ ಅವಹೇಳನಕ್ಕೆ ಕಾರಣವಾಗುತ್ತದೆ. ಆಗ ಪರ್ಯಾಯ ದಾರಿಗಳ ಹುಡುಕಾಟ ಮೊದಲಾಗುತ್ತದೆ. ಅಂತಹ ದಾರಿಗಳು ಹಲವು ಇರಬಹುದು.

೪. ಆರ್ಥಿಕ, ಸಾಮಾಜಿಕ ದಮನ ಹಾಗೂ ಅವಹೇಳನಗಳು ಸ್ಥೂಲ ಹಾಗೂ ಸೂಕ್ಷ್ಮ ವಿಧಾನಗಳಲ್ಲಿ ನಡೆಯುತ್ತಿವೆ. `ಇವುಗಳನ್ನು ಗುರುತಿಸುವುದು ಮತ್ತು ವಿರೋಧಿಸುವುದು ನ್ಯಾಯವಲ್ಲ, ಸಭ್ಯತೆಯಲ್ಲ’ ಎಂಬ ಒತ್ತಡ ಪ್ರಭುತ್ವದ್ದು ಹಾಗೂ `ನಾಗರಿಕ ಸಮಾಜ’ದ್ದು. ಹಾಗಾಗಿ ಇಂತಹ ಸೂಕ್ಷ್ಮ ಅವಹೇಳನಗಳನ್ನು ಅನುಭವಿಸಿಯೂ ಅನುಭವಿಸಿಲ್ಲವೆಂದು ಬಲಾತ್ಕಾರವಾಗಿ ಮುಚ್ಚಿಟ್ಟುಕೊಳ್ಳುವ ಕ್ರೂರ ಸ್ಥಿತಿ ಇದೆ. `ಹತ್ತಿಕ್ಕುವುದು, ಅಪಮಾನಿಸುವುದು ನಮ್ಮ ಹಕ್ಕು; ಅದನ್ನು ಅನುಭವಿಸುವುದು ನಿಮ್ಮ ಕರ್ಮ/ ಕರ್ತವ್ಯ’ ಎಂಬ ಅಘೋಷಿತ ಸಾಮಾಜಿಕ ಆಚರಣೆ ಜಾರಿಯಲ್ಲಿದೆ. ದಮನ, ಅವಹೇಳನ ಮಾಡುತ್ತಿರುವವರೇ ಅವುಗಳ ಪರಿಹಾರಕ್ಕೆ ಕಾರ್ಯಸೂಚಿಯನ್ನೂ ಕೊಡುತ್ತಿದ್ದಾರೆ.

೫. `ಮತಾಂತರ’ವು ಎರಡು ಆಯಾಮಗಳಿಂದ ಪ್ರೇರಿತವಾಗಬಹುದು.
ಒಂದು: ಒಳಗಿನ ಒತ್ತಡ, ಎರಡು: ಹೊರಗಿನ ಪ್ರಭಾವ.
ಒಂದು:
ಅವಹೇಳನ ಮತ್ತು ಅಪಮಾನಗಳ ನೋವುಂಡವರು ತಮ್ಮ ಒಳಗಿನಿಂದಲೇ ಯಾವುದಾದರೂ ದಾರಿ ಹುಡುಕಬಹುದು. ಅಂತಹ ದಾರಿಗಳು ಕೇವಲ ಜಾತಿ, ಮತ ಹಾಗೂ ಧರ್ಮದ ಚೌಕಟ್ಟಿನಲ್ಲಿ ಮಾತ್ರ ಇರುವುದಿಲ್ಲ. ದುಡಿಮೆ, ಉತ್ಪಾದನೆ, ಉದ್ಯೋಗ ಇತ್ಯಾದಿಗಳ ಹೊಸ ಹುಡುಕಾಟವೂ ಇರಬಹುದು. ಶೋಷಿತ ಸಮುದಾಯಗಳ ಇತ್ತೀಚಿನ ತಲೆಮಾರು ತಮ್ಮ ಊರು/ಕೇರಿಗಳಿಂದ ಹೊರಗೆ ಹೋಗುತ್ತಿರುವುದು ಕೇವಲ ಕೂಲಿಗಾಗಿ ಮಾತ್ರ ಎಂದು ಸರಳೀಕರಿಸುವಂತಿಲ್ಲ. ಭೂಮಾಲಿಕತ್ವದ ಹೊಸ ಕ್ರೌರ್ಯಗಳು ಇವರನ್ನು ದಮನಿಸುತ್ತಿರುವ ಬಗ್ಗೆ ಹೆಚ್ಚಿನ ಅರಿವು ಬೇಕಾಗಿದೆ.

ಎರಡು:
ಶೋಷಣೆ ಮತ್ತು ಅಪಮಾನಗಳನ್ನು ಪ್ರತ್ಯೇಕಿಸಲು ಬರುವುದಿಲ್ಲ. ಪ್ರಭುತ್ವ ಮತ್ತು ಅದರ ಏಜೆನ್ಸಿಗಳು ಅಥವ ಪ್ರಭುತ್ವ ತಾನೇ (ಸಾಮ್ರಾಜ್ಯಶಾಹಿಗೆ) ಏಜೆನ್ಸಿಯಾಗಿ ಇವೆರಡೂ ಪ್ರತ್ಯೇಕವೆಂದು ನಂಬಿಸುತ್ತದೆ. ಹಾಗೆ ನಂಬಿಸಿ ಕೇವಲ ಅಪಮಾನವನ್ನು ಮಾತ್ರ ಪರಿಗಣಿಸಿ, `ಸಾಮಾಜಿಕ ಸ್ಥಾನಮಾನ’ ಎಂಬ ವೇಷದಲ್ಲಿ `ಮತಾಂತರ ಆಗುವಂತೆ’ ಹೊರಗಿನಿಂದ ಪ್ರಭಾವಿಸಲೂಬಹುದು. ಸಾಮ್ರಾಜ್ಯಶಾಹಿ ತನ್ನ ತಂತ್ರ ಹಾಗೂ ಹಿತಾಸಕ್ತಿಗಳನ್ನು ಸಾಮಾಜಿಕ ಚಳುವಳಿ ಹಾಗೂ ಎನ್‌ಜಿ‌ಓಗಳ ಮೂಲಕ ಪೂರೈಸಿಕೊಳ್ಳುತ್ತಿದೆ. ಇದರ ಉದ್ದೇಶ ಖಚಿತ ಮತ್ತು ಸ್ಪಷ್ಟ. ಶೋಷಿತರ ಪ್ರಾಥಮಿಕ ಅಗತ್ಯವಾದ ಆರ್ಥಿಕ ಬೇಡಿಕೆಯನ್ನು/ ಸಮಸ್ಯೆಯನ್ನು ಮುಚ್ಚಿಡುವುದು. ಅದರ ಜಾಗದಲ್ಲಿ ಮತ, ಧರ್ಮ, ಸಂಸ್ಕೃತಿಯ ವಿಷಯಗಳನ್ನು ತಂದು ಇವೇ ಮುಖ್ಯ ಎಂದು ನಂಬಿಸುವುದು. ವರ್ಗಾಂತರವನ್ನು ಮುಚ್ಚಿಟ್ಟು ಮತಾಂತರವನ್ನು ಮುಂದು ಮಾಡುವುದು. ಮೂಲ ಅಗತ್ಯಗಳ ಹಂಚಿಕೆಯಲ್ಲಿ ಮಾಡಲಾಗಿರುವ ಅನ್ಯಾಯ ಹಾಗೂ ಅದರ ಪರ್ಯಾಯದ ಬಗ್ಗೆ ಆಲೋಚಿಸದಂತೆ ಮಾಡುವುದು. ಜೊತೆಗೆ ಶೋಷಣೆಯ ವ್ಯವಸ್ಥೆಗೆ ಹೊಂದಿಕೊಂಡು ಹೋಗುವಂತಹ ಪ್ರಜ್ಞೆಯನ್ನು ರೂಪಿಸಲು ಪ್ರಯತ್ನಿಸುವುದು. ಹೊರಗಿನ ಪ್ರಭಾವವನ್ನೇ ಸಮುದಾಯಗಳು ತಮ್ಮ ಒಳಗಿನ ಒತ್ತಡವೆಂದು ನಂಬುವಂತೆ ಮಾಡುವುದು.

೬. ಮತಾಂತರ:
ಎ) ಉಪಶಮನವೊ, ಬಿ) ದಾರಿಯೊ, ಸಿ) ಗುರಿಯೊ
ಈ ಮೂರಕ್ಕೂ ಸ್ಪಷ್ಟ ವ್ಯತ್ಯಾಸಗಳಿವೆ. ಎ) ಉಪಶಮನ ಮೇಲುಸ್ತರದ್ದು, ತಾತ್ಕಾಲಿಕವಾದುದು. ಎರಡನೇ ಇಲ್ಲವೆ ಮೂರನೇ ಆದ್ಯತೆಯದು. ಮೊದಲನೇ ಆದ್ಯತೆಯದಂತೂ ಅಲ್ಲವೇ ಅಲ್ಲ. ಹಾಗಾಗಿ ಅದು ಮೊದಲನೇ ಆದ್ಯತೆಯನ್ನು ನಯವಾಗಿ ಮುಚ್ಚಿಡಲು ಕಾರಣವಾಗುತ್ತದೆ. ಲಕ್ಷಣವನ್ನೇ ಕಾರಣವೆಂದು ತಿಳಿಯುತ್ತದೆ.
ಬಿ) ದಾರಿಯು ಗುರಿ ಮುಟ್ಟಲು ಆಯ್ಕೆ ಮಾಡಿಕೊಳ್ಳುವ ವಿಧಾನವಾಗಿದೆ. ಗುರಿ ಮುಟ್ಟಲು ದಾರಿ/ ವಿಧಾನ ಬಹಳ ಮುಖ್ಯ. ಇದನ್ನು ಅವಗಣನೆ ಮಾಡಿದರೆ ಗುರಿ ಮುಟ್ಟಲು ಸಾಧ್ಯವಿಲ್ಲ. ಪರಿಸ್ಥಿತಿ ಬದಲಾದಂತೆ ದಾರಿಯನ್ನು ಬದಲಾಯಿಸಿ ಕೊಳ್ಳಬೇಕಾಗುತ್ತದೆ. ಅಥವಾ ಬದಲಾದ ಪರಿಸ್ಥಿತಿಯೇ ದಾರಿಯನ್ನು ರೂಪಿಸುತ್ತದೆ, ನಿರ್ಧರಿಸುತ್ತದೆ. ಬದಲಾದ ಪರಿಸ್ಥಿತಿಯನ್ನು ತಪ್ಪಾಗಿ ತಿಳಿದಾಗ, ತಪ್ಪು ದಾರಿ/ ತಪ್ಪು ವಿಧಾನವನ್ನು ಹಿಡಿದು, ಅದನ್ನೇ ಸರಿ ಎಂದು ನಂಬಲಾಗುತ್ತದೆ. ಆದರೆ ದಾರಿಯನ್ನೇ ಗುರಿ ಎಂದು ತಿಳಿಯಬಾರದು. `ಮತಾಂತರ’ಕ್ಕೆ ಕಾರಣವನ್ನು ಕೇವಲ ಮತಧರ್ಮಗಳ ವ್ಯಾಪ್ತಿಯಲ್ಲಿ ಮಾತ್ರ ಗುರುತಿಸಲಾಗಿದ್ದು, ಅದೇ ಸೀಮಿತ ನೆಲೆಯಲ್ಲಿ ಮಾತ್ರ ಅದರ ದಾರಿಯನ್ನು ರೂಪಿಸಲಾಗಿದೆ. ಈ ದಾರಿಯು ರಾಜಕೀಯ ಮತ್ತು ಆರ್ಥಿಕ ಪ್ರಶ್ನೆಯನ್ನು ಬದಿಗಿಡುವಂತೆ ಮಾಡಿದೆ.
ಸಿ) ಅನುಸರಿಸುವ ಸರಿಯಾದ ದಾರಿಯಿಂದಲೇ ಗುರಿಯು ಸಾಧ್ಯವಾಗುತ್ತದೆ. ಗುರಿ ಮುಟ್ಟಿದ ಮೇಲೆ ಸಾಗಿ ಬಂದ ದಾರಿ ಸಂಪೂರ್ಣ ವಿಸರ್ಜನೆಗೊಂಡು ಗುರಿ ಮಾತ್ರ ಉಳಿಯುತ್ತದೊ ಅಥವ ಸಾಧಿಸಿದ ಗುರಿಯನ್ನು ಉಳಿಸಲು/ ಮುಂದುವರಿಸಲು ಮತ್ತೆ (ಹೊಸ) ದಾರಿಗಳನ್ನು ಕಂಡುಕೊಳ್ಳಬೇಕೊ ಎಂಬ ಹೊಸ ಪ್ರಶ್ನೆಗಳು ಎದುರಾಗುತ್ತವೆ. ಸಧ್ಯ `ಮತಾಂತರ’ವನ್ನು ಗುರಿ ಎಂದೇ ಭಾವಿಸುವಂತೆ ಮಾಡಲಾಗಿದೆ. ಆದರೆ ಅದರ ನಿಜವಾದ ವಸ್ತುಸ್ಥಿತಿ ಮಾತ್ರ ಕೇವಲ ಉಪಶಮನದ ಹಂತದಲ್ಲಿದೆ. ಹಾಗಾಗಿಯೇ ಮತಾಂತರದ ನಂತರ ಅಲ್ಲಿ ಹೊಸ ಸಮಸ್ಯೆಗಳು ಸೃಷ್ಟಿಯಾಗಿವೆ. ಅವುಗಳನ್ನು ಎದುರಿಸಲು ಮತ್ತೆ ಹೊಸ ದಾರಿಗಳ, ಹೊಸ ಗುರಿಯ ಅವಶ್ಯಕತೆ ಇದೆ.

೭. ಮತಾಂತರ: ವಿರೋಧ ಯಾಕೆ?
ಮತಾಂತರವನ್ನು ಸಮರ್ಥಿಸಿ ಬೆಳೆಯುತ್ತಿರುವ ಸಾಹಿತ್ಯವು ಊಳಿಗಮಾನ್ಯಶಾಹಿಯನ್ನು ಮುಚ್ಚಿಟ್ಟು ವರ್ಣ ಅಸಮಾನತೆಯನ್ನು ದಾಖಲಿಸುತ್ತಿದೆ. ಅಸ್ಪೃಶ್ಯತೆ ಮತ್ತು ಜಾತಿ ಅಪಮಾನವನ್ನು ದಿನನಿತ್ಯ ಕಾಪಾಡುತ್ತಿರುವವರು ಮಧ್ಯಮ ಜಾತಿಯವರು/ ಊಳಿಗಮಾನ್ಯಶಾಹಿ. ಅವರು ಮತಾಂತರದ ಬಗ್ಗೆ ಬಹಿರಂಗ ವಿರೋಧ ಮಾಡುತ್ತಿಲ್ಲ. ಊಳಿಗಮಾನ್ಯಶಾಹಿಯ ಈ ನಿಲುವಿನ ಬಗೆಗೆ ನಮಗಿನ್ನೂ ಹೆಚ್ಚಿನ ಅರಿವು ಬೇಕಾಗಿದೆ. ಆದರೆ ಅಸ್ಪೃಶ್ಯತೆ ಮತ್ತು ಜಾತಿ ಅಪಮಾನವನ್ನು ನೇರ ಹಾಗೂ ಪ್ರತ್ಯಕ್ಷ ರೂಪದಲ್ಲಿ ಕಾಪಾಡದಿರುವವರು `ಮತಾಂತರ’ವನ್ನು ವಿರೋಧಿಸುತ್ತಿರುವುದು, `ಮತಾಂತರ’ ಎಂಬ ಸಾಮಾಜಿಕ ಕ್ರಿಯೆಗಿಂತ ಹೆಚ್ಚಾಗಿ ಅದರ ಒಡಲೊಳಗಿಂದ ಹುಟ್ಟುತ್ತಿರುವ ವರ್ಣ ವಿರೋಧದ ಆಲೋಚನ ಕ್ರಮದ ಬಗೆಗಿನ ಆತಂಕದಿಂದ ಎಂದು ಕಾಣುತ್ತದೆ.

೮. ಮತಾಂತರ: ಚರ್ಚೆಗೆ ಬೇಕಾದ ಚೌಕಟ್ಟು
ಶೋಷಿತರ ಬದುಕುವ ಹಕ್ಕನ್ನೇ ಕಿತ್ತುಕೊಂಡಿರುವ ಸಾಮ್ರಾಜ್ಯಶಾಹಿಯ ಹೊಸರೂಪದ ಸುಲಿಗೆಯ ವಿಧಾನಗಳು, ಇವುಗಳೊಂದಿಗೆ ಕೈಜೋಡಿಸಿರುವ ಊಳಿಗಮಾನ್ಯಶಾಹಿಯ ಬದಲಾದ ರೂಪ ಹಾಗೂ ಪ್ರಭುತ್ವ ಇವುಗಳ ವಿಶಾಲವಾದ ಚೌಕಟ್ಟಿನಲ್ಲಿ, `ಮತಾಂತರ’ವನ್ನು ಕುರಿತು ಚರ್ಚಿಸಬೇಕಾಗಿದೆ.

Saturday, November 22, 2008

ಮತಾಂತರ ಒಂದು ಚರ್ಚೆ

ಮತಾಂತರ: ಚರ್ಚೆಗೆ ನೆರವಾಗಲು ಒಂದು ಟಿಪ್ಪಣಿ

ಪ್ರಶ್ನೆಗಳು:

೧. ಮತಾಂತರ ಯಾರ ಪ್ರಶ್ನೆ?

ಈಗ ಮತಾಂತರವನ್ನು ಕುರಿತು ಬರೆಯುತ್ತಿರುವವರು ಮಾತನಾಡುತ್ತಿರುವವರು'ಸಂಚಿ'ನ ಮಾದರಿಯಲ್ಲಿ ತಮ್ಮ ಗ್ರಹಿಕೆಗಳನ್ನು ಮಂಡಿಸುತ್ತಿದ್ದಾರೆ. ಅಂತಾರಾಷ್ಟ್ರೀಯ ನೆಲೆಯ ಸಂಚಿನ ಭಾಗವಾಗಿ 'ನಮ್ಮ' ಸಮಾಜವನ್ನು 'ಒಡೆದು' ಆಳಲು ಮತಾಂತರವನ್ನು ಒಂದು ತಂತ್ರವಾಗಿ ಬಳಸಲಾಗುತ್ತಿದೆ ಎಂದು ವಿವರಿಸುತ್ತಿದ್ದಾರೆ.

ಈ ವಾದವನ್ನು ಮಂಡಿಸುತ್ತಿರುವವರ ಗ್ರಹಿಕೆಯಂತೆಯೇ ನೋಡಿದರೆ ಯಾರು ಮತಾಂತರಗೊಳ್ಳುತ್ತಿದ್ದಾರೆ ಎಂಬ ಪ್ರಶ್ನೆ ಕುತೂಹಲಕಾರಿಯಾದುದು. ವೈಯುಕ್ತಿಕ ನೆಲೆಯ ಪಲ್ಲಟಗಳನ್ನು ಹೊರತು ಪಡಿಸಿದರೆ ಸಾಮೂಹಿಕವಾಗಿ 'ನಡೆಯುತ್ತಿರುವ' ಮತಾಂತರಗಳಲ್ಲಿ 'ಭಾಗಿ'ಯಾಗುತ್ತಿರುವವರು ಸಮಾಜದ ಅಂಚಿನಲ್ಲಿರುವವರು. ಇವರು ಅ). ಮತಾಂತರವನ್ನು ತಮ್ಮ ಆಯ್ಕೆ ಎಂದು ತಿಳಿದವರಾಗಿರಬಹುದು; ಇಲ್ಲವೇ ಆ) ಇತರರು ಹೇಳುವಂತೆ 'ಬಲಿಪಶು'ಗಳಾಗಿರಬಹುದು.ಇವರಲ್ಲಿ ಮೊದಲಿನವರು ಮತಾಂತರ ಏಕೆ ತಮ್ಮ ಆಯ್ಕೆ ಎಂಬ ಬಗೆಗೆ ತಮ್ಮ ನಿಲುವನ್ನು ಮಂಡಿಸುತ್ತಿದ್ದಾರೆ. ಎರಡನೆಯ ಗುಂಪಿನವರ ಬಗೆಗೆ ಇತರರು ತಮ್ಮ ನಿಲುವನ್ನು ಮಂಡಿಸುತ್ತಿದ್ದಾರೆ.

ಯಾವುದೇ ಸಾಮೂಹಿಕ ಆಯ್ಕೆಯ ಹಿಂದೆ ವ್ಯಕ್ತಿಗತ ನಿರ್ಧಾರಗಳು ಮುಖ್ಯವಾಗುವುದಿಲ್ಲ. ಅಂತಹ ಸಾಮೂಹಿಕ ಚಲನೆಯ ಹಿಂದೆ ಹಲವು ಒತ್ತಡಗಳು ಇದ್ದೇ ಇರುತ್ತವೆ. ಅದು ಪ್ರಚಾರವಿರಬಹುದು; ಪ್ರೇರಣೆ ಇರಬಹುದು. ಇಲ್ಲವೇ ಮತ್ತಾವುದೇ ಕಟ್ಟು ಇರಬಹುದು. ಸಮುದಾಯ ಇಲ್ಲವೇ ಅದರ ಭಾಗ ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಅದಕ್ಕೆ ಕೊಡುವ ಕಾರಣಗಳಿಗೂ ಆ ನಿರ್ಧಾರದ ಪರಿಣಾಮಗಳಿಗೂ ನೇರವಾದ ಸಂಬಂಧ ಇರಲೇ ಬೇಕೆಂಬ ನಿಯಮಗಳಿಲ್ಲ. ಉದಾಹರಣೆಗೆ ಇಂಡಿಯಾದ ದಲಿತರು ಇಲ್ಲವೇ ಅವರಲ್ಲಿನ ಒಂದು ಗುಂಪು ಬೌದ್ಧಧರ್ಮಕ್ಕೆ ಸೇರ್ಪಡೆಯಾಗುವ ನಿರ್ಣಯವನ್ನು ತೆಗೆದುಕೊಂಡರೆ ಆ ನಿರ್ಣಯದ ಹಿಂದೆ ತಮ್ಮ ಸಾಮಾಜಿಕ ಪರಿಸ್ಥಿತಿಯಿಂದ ಹೊರಬರುವ ಇರಾದೆ ಕೆಲಸ ಮಾಡುತ್ತಿರುತ್ತದೆ. ಇದನ್ನವರು ಸ್ಪಷ್ಟವಾದ ಮಾತುಗಳಲ್ಲಿ ಹೇಳುತ್ತಿರುತ್ತಾರೆ ಕೂಡ. ಆದರೆ ಈ ಪರಿವರ್ತನೆಯ ಪರಿಣಾಮ ಅವರು ಬೌದ್ಧರಾಗಿ ತಮ್ಮ ಜೀವನ ಕ್ರಮವನ್ನು ಬದಲಾಯಿಸಿಕೊಂಡಿದ್ದಾರೆ ಎಂದಲ್ಲ. ಇಂತಹ ಪರಿವರ್ತನೆಗಳ ಪರಿಣಾಮ ಬೇರೇನೋ ಆಗಿರಲು ಸಾಧ್ಯವಿದೆ.

ಇದೇ ಪರಿಸ್ಥಿತಿ 'ಗೊತ್ತಿಲ್ಲದೆ' ಮತಾಂತರಗೊಳ್ಳುವವರಲ್ಲೂ ಕಾಣುತ್ತದೆ. ಅವರು 'ಇನ್ನೊಂದು' ಧರ್ಮಕ್ಕೆ ಬದಲಾಗಲು ಇರುವ ಕಾರಣಗಳನ್ನು ಕೇವಲ ಅವರ ಮೇಲೆ ಮಂಕುಬೂದಿ ಎರಚುವವರಲ್ಲಿ ಹುಡುಕುವ ಯತ್ನ ಸರಿಯಲ್ಲ. ಹೀಗೆ 'ಮಂಕುಬೂದಿ' ಎರಚುವ ಪರಿಸ್ಥಿತಿ ಏಕೆ ಉಂಟಾಗಿದೆ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ. ಬದುಕಿನ 'ಬೇಕು'ಗಳಿಂದ ಹೊರಗುಳಿದವರಿಗೆ ಅದು ಸಿಗುವ ಯಾವ ಹಾದಿಯಾದರೂ ಒಂದು ಸೆಳೆತವಾಗಿಯೇ ಕಾಣುತ್ತದೆ. ಅದರಲ್ಲೂ ಆಹಾರ,ಆರೋಗ್ಯ,ವಸತಿ ಇವುಗಳ ಹುಡುಕಾಟದಲ್ಲಿರುವವರಿಗೆ ಅದು ಸಿಗುತ್ತದೆ ಎಂಬ ನಂಬಿಕೆ ಒಂದು ಸೆಳೆತವೇ ಆಗಿಬಿಡುತ್ತದೆ. ಅವರ ನಿರ್ಗತಿಕತೆಯನ್ನು 'ಪ್ರಚಾರಕರು' ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂಬ ತರ್ಕ ಹೂಡುವವರು ಈ ನಿರ್ಗತಿಕತೆಗೆ ಕಾರಣಗಳನ್ನು ಮತ್ತು ಅದರ ಪರಿಹಾರಕ್ಕೆ ಹೂಡಿದ ಕಾರ್ಯಯೋಜನೆಗಳನ್ನು ಕುರಿತು ಚಿಂತಿಸುವುದು ಅಗತ್ಯವಲ್ಲವೇ?

೨. ಮತಾಂತರ ಒಂದು ಆರ್ಥಿಕ ಸಾಮಾಜಿಕ ನೆಲೆಯ ಪ್ರಕ್ರಿಯೆ. ಇದು ನಾವು ಆಯ್ದುಕೊಂಡ ಅಭಿವೃದ್ಧಿಯ ಮಾದರಿಯ ಪರಿಣಾಮವೂ ಹೌದು. ನಮ್ಮ ಅಭಿವೃದ್ಧಿಯ ಮಾದರಿಯಲ್ಲಿ 'ಒಳಗೊಳ್ಳುವ' ನೆಲೆಗಳಿಗಿಂತ 'ಹೊರಗಿಡುವ' ನೆಲೆಗಳು ಬಲಶಾಲಿಯಾಗಿವೆ. ರಾಜಕೀಯ ಸಮಾನತೆಯನ್ನು ಒಬ್ಬರಿಗೆ ಒಂದು ಓಟು ಎಂಬುದರಿಂದ ನಿರ್ಧರಿಸಿದ್ದೇವೆ. ಆದರೆ ಆರ್ಥಿಕ ಮತ್ತು ಸಾಮಾಜಿಕ ಸಮಾನತೆಗಳು 'ಸಾಧಿಸ'ಬೇಕಾದ ಗುರಿಗಳಾಗಿವೆ. ಈ ಹಾದಿಯಲ್ಲಿ ಸಮಬಲಗಳ ನಡುವೆ ಓಟ ಏರ್ಪಟ್ಟಿಲ್ಲ; ಅಸಮಾನತೆಯನ್ನು ಬಳಸುದಾರಿಯಿಂದ ಕಾಯ್ದುಕೊಂಡು ಹೋಗುವ ಮಾದರಿಯೇ ನೆಲೆಗೊಂಡಿದೆ. ಇದರಲ್ಲಿ ಪಾರಂಪರಿಕವಾಗಿ 'ಹೊರಗುಳಿದಿದ್ದವರ' ಜೊತೆಗೆ ಈ ಪ್ರಕ್ರಿಯೆಯಿಂದಾಗಿ 'ಹೊರಗುಳಿಯಬೇಕಾಗಿ'ಬಂದವರು ಸೇರಿಕೊಂಡಿದ್ದಾರೆ.

ಮೊದಲಗುಂಪಿನಲ್ಲಿ ಬುಡಕಟ್ಟುಜನರು,ದಲಿತರು ಇದ್ದರೆ ಎರಡನೆಯ ಗುಂಪಿನಲ್ಲಿ ತಮ್ಮ ಪಾರಂಪರಿಕ ಕೌಶಲ್ಯಗಳು ಹೊಸ ಜಗತ್ತಿನಲ್ಲಿ ನಿರುಪಯುಕ್ತಗೊಂಡದ್ದರಿಂದಲೇ ಅಸಹಾಯಕರಾದ ಜನ ಸಮುದಾಯವಿದೆ. ಮತಾಂತರವೆಂಬುದು ಈ ಕಾರಣಗಳಿಂದ ಬೆಳೆದು ನಿಂತ ಸಮುದಾಯದಲ್ಲಿ ನಡೆಯುತ್ತಿರುವ ಚಟುವಟಿಕೆಯಾಗಿದೆ. ಇದು ತಮ್ಮ 'ಅಂಚಿನ ಸಮಾಜದ' ನಿರ್ಗತಿಕತೆಯಿಂದ ಹೊರಬರಲು ನಡೆಸುತ್ತಿರುವ ಯತ್ನವಾಗಿ ತೋರುತ್ತಿದೆ. ಇದು ಫಲಕಾರಿಯೋ ಅಲ್ಲವೋ ಎನ್ನುವುದು ಮುಖ್ಯವಲ್ಲ. ಹೀಗಾಗಲು ಕಾರಣಗಳೇನು ಎಂಬುದನ್ನು ನಾವು ಮೊದಲು ಗ್ರಹಿಸದಿದ್ದಲ್ಲಿ ತಪ್ಪು ವಿಶ್ಲೇಷಣೆಯಲ್ಲಿ ಮಗ್ನರಾಗುತ್ತೇವೆ.

೩. ಈ ಚರ್ಚೆ ಈಗ ನಡೆಯುತ್ತಿರುವ ಬಗೆ ಏನನ್ನು ಸೂಚಿಸುತ್ತಿದೆ?

ಮತಾಂತರದ ಪ್ರಶ್ನೆಯನ್ನು ಚಾರಿತ್ರಿಕವಾಗಿ ನೋಡಬಹುದು;ಜಾಗತಿಕವಾಗಿ ನೋಡಬಹುದು ಮತ್ತು ಸಮಕಾಲೀನ ವಿದ್ಯಮಾನವಾಗಿಯೂ ನೊಡಬಹುದು. ಯಾವ ನಿಟ್ಟಿನಲ್ಲಿ ಈ ಪ್ರಶ್ನೆಯನ್ನು ಚರ್ಚಿಸುತ್ತಿದ್ದೇವೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಆಗತ್ಯ. ಏಕೆಂದರೆ ಒಂದು ನೆಲೆಯಲ್ಲಿ ಬಳಸುವ ಪರಿಕರಗಳನ್ನು ಇನ್ನೊಂದು ನೆಲೆಯಲ್ಲಿ ಬಳಸುವುದು ತಪ್ಪಾಗುತ್ತದೆ. ಉದಾ.ಗೆ. ಸ್ವಾತಂತ್ರ್ಯ ಪೂರ್ವದಲ್ಲಿ ನಡೆಯುತ್ತಿದ್ದ ಮತಾಂತರಗಳ ಒಂದು ಲಕ್ಷಣ ಈಗಿನ ಮತಾಂತರಗಳಲ್ಲಿ ಕಾಣುವುದಿಲ್ಲ. ಊಳಿಗಮಾನ್ಯ ವ್ಯವಸ್ಥೆಯಲ್ಲಿ ಯಜಮಾನನ ಮತಾಂತರದ ಮೂಲಕ ಇಡೀ ಸಮುದಾಯವನ್ನು ಬದಲಿಸುವ ತಂತ್ರವನ್ನು ಬಳಸಿದ್ದನ್ನು ನೋಡುತ್ತೇವೆ. ಮಧ್ಯಕಾಲೀನ ಕರ್ನಾಟಕದಲ್ಲಿ ಈ ಬಗೆ ಇದ್ದುದಕ್ಕೆ ಪುರಾವೆಗಳು ದೊರಕುತ್ತವೆ. ಆದರೆ ಈಗ ಈ ಮಾದರಿ ಕಾಣಸಿಗುತ್ತಿಲ್ಲ. ಆದ್ದರಿಂದ ಇಂದಿನ ಪ್ರಕ್ರಿಯೆಯನ್ನು ಚಾರಿತ್ರಿಕ ನೆಲೆಯ ನಿದರ್ಶನಗಳಿಂದ ವಿವರಿಸಲು ಆಗುವುದಿಲ್ಲ.

ಈಗ ಈ ಪ್ರಶ್ನೆಯನ್ನು ಮುಂಚೂಣಿಗೆ ತರುತ್ತಿರುವುವವರು ಯಾರು? ಮೊದಲೇ ಹೇಳಿದಂತೆ ಮತಾಂತರದ 'ಖೆಡ್ಡ'ಕ್ಕೆ ಬಿದ್ದವರೂ ಅಲ್ಲ; ಅದನ್ನು ಒಂದು ಹೊರದಾರಿ ಎಂದು ಕಂಡುಕೊಂಡವರೂ ಅಲ್ಲ. ಹೊಸ ಆರ್ಥಿಕ ವ್ಯವಸ್ಥೆಯ ಬಿಕ್ಕಟ್ಟುಗಳಿಂದಾಗಿ ಸಾಂಪ್ರದಾಯಿಕ ಯಾಜಮಾನ್ಯಕ್ಕೆ ಕೊಡಲಿಯೇಟು ಬಿದ್ದಿರುವುದಂತೂ ನಿಜ. ಅಂದರೆ ಹೊಸ ಗುರುತುಗಳು ಈಗ ಮುಂಚೂಣಿಗೆ ಬಂದಿವೆ. ಉಳ್ಳವರು ಜಾಗತಿಕ ಮಟ್ಟದ ಸಂಪರ್ಕ ಜಾಲದಲ್ಲಿ ತಮ್ಮ ಗುರುತುಗಳನ್ನು ಕಂಡುಕೊಳ್ಳ ತೊಡಗಿರುವುದು ಎದ್ದು ಕಾಣುತ್ತಿರುವ ಸಂಗತಿ. ಇದರ ಪ್ರತಿರೋಧವಾಗಿ 'ಅಂಚಿನ ಸಮುದಾಯ'ಗಳು ಕೂಡ ಜಾಗತಿಕ ನೆಲೆಯ ಸಂಪರ್ಕಜಾಲದೊಳಗೆ ತಮ್ಮನ್ನು ತಾವು ಸೇರಿಸಿಕೊಳ್ಳುವುದು ಅನಿವಾರ್ಯವಾಗಿದೆ. ದಲಿತರ ಪ್ರಶ್ನೆಯನ್ನು ವರ್ಣಭೇದ ಪ್ರಶ್ನೆಯೊಂದಿಗೆ ಜೋಡಿಸಿ ಅದನ್ನು ಮಾನವ ಹಕ್ಕುಗಳ ಚರ್ಚಿಸಬೇಕೆಂಬ ಕರೆ ಇಂತಹ ಪ್ರಕ್ರಿಯೆಯ ಪರಿಣಾಮವೇ ಆಗಿದೆ. ಇದು ವೈರುದ್ಧ್ಯ ಪ್ರಕಟಗೊಳ್ಳುವ ರೀತಿಯೇ ಹೊರತು ವೈರುದ್ಧ್ಯ ಪರಿಹಾರಗೊಳ್ಳುವ ಬಗೆಯಲ್ಲ. ಆದರೂ ಈ ಹೊಸ ಗುರುತಿಗಾಗಿ ನಡೆಸಿರುವ ಪ್ರಯತ್ನಗಳು ಸಾಂಪ್ರದಾಯಿಕ ನೆಲೆಗಳಿಗೆ ಆತಂಕವನ್ನು ತಂದಿವೆ. ಈ ಸಂಪರ್ಕ ಜಾಲ ನಿರ್ಮಾಣ ತರಬಹುದಾದ ಹೊಸ ಸವಾಲುಗಳನ್ನು ನಿವಾರಿಸಿಕೊಳ್ಳಲು ಮತಾಂತರವನ್ನು ಕುರಿತ ಇಂತಹ ಚರ್ಚೆಗಳನ್ನು ಹುಟ್ಟುಹಾಕಲಾಗುತ್ತಿದೆ.

೪. ಮತಾಂತರದ ಪರ ಇಲ್ಲವೇ ವಿರುದ್ಧ ಎಂಬ ನಿಲುವು ಸರಿಯಲ್ಲ. ಇವೆರಡೂ ನಮ್ಮನ್ನು ದಿಟವನ್ನು ಅರಿಯಲು ನೆರವಾಗುವುದಿಲ್ಲ. ಬುದ್ಧಿಯನ್ನು ಬಳಸಿ ಯಾವುದೇ ಪಕ್ಷದ ವಾದವನ್ನು ಸಮರ್ಥಿಸಲೂ ಬಹುದು ಹಾಗೆಯೇ ಖಂಡಿಸಲೂ ಬಹುದು. ಆದರೆ ಇದು ಕುರುಹುಗಳನ್ನು ಹಿಡಿದು ನಡೆಸುವ ವಾಗ್ವಾದವಾಗಿದೆ. ಇಲ್ಲಿ ಮಾತಿಗೆ ಪ್ರಾಧಾನ್ಯ ಒದಗಿಬಿಡುತ್ತದೆ. ಕಾಣುವ ಕುರುಹುಗಳನ್ನು ಬೆಳೆಸಿದ ಮೂಲವನ್ನು ಹುಡುಕಿ ಅಲ್ಲಿಂದ ಮೊದಲು ಮಾಡಬೇಕಿದೆ. ಇಂತಹ ಚರ್ಚೆಗಳಿಗೆ ಇನ್ನೊಂದು ಉದ್ದೇಶವೂ ಇರುತ್ತದೆ. ಅದು ದುರ್ಬಲರಲ್ಲಿ ಅಭದ್ರತೆಯ ಭಾವನೆಯನ್ನು ಮೂಡಿಸುವುದು. ಸ್ವಲ್ಪ ಮಟ್ಟಿಗೆ ಈ ಉದ್ದೇಶವನ್ನು ಸಾಧಿಸುವಲ್ಲಿ ಈ ವಾಗ್ವಾದಗಳು ಗೆಲುವನ್ನು ಪಡೆಯಲೂ ಬಹುದು. ಆದರೆ ಪರಿಸ್ಥಿತಿಯಲ್ಲಿ ಬದಲಾವಣೆಯನ್ನು ತರಲಾರದು.

೫. ಇನ್ನೂ ಒಂದು ದಿಕ್ಕಿನಿಂದ ಈ ಪ್ರಶ್ನೆಯನ್ನು ಅರಿತುಕೊಳ್ಳಲು ಸಾಧ್ಯವಿದೆ.ಗತಿತಾರ್ಕಿಕತೆಯ ನೆಲೆಯಿಂದ ನೋಡಿದರೆ ಈಗ ಮತಾಂತರ ಒಂದು ಕಿರು ವೈರುದ್ಧ್ಯ. ಇದಕ್ಕೂ ಮುಖ್ಯವಾದ ಹಿರಿ ವೈರುದ್ಧ್ಯಗಳಿವೆ. ಅಧಿಕಾರಸ್ಥರು ಕೆಲವೊಮ್ಮೆ ಬೇಕೆಂತಲೇ ತಮ್ಮ ವಿಶ್ಲೇಷಣೆಯಲ್ಲಿ ಈ ವೈರುದ್ಧ್ಯಗಳ ಶ್ರೇಣಿಯಲ್ಲಿ ಅದಲು ಬದಲು ಮಾಡುತ್ತಾರೆ. ಆಗ ಕಿರು ವೈರುದ್ಧ್ಯವೇ ಮುಂಚೂಣಿಯಲ್ಲಿದೆಯೆಂಬ ಭ್ರಮೆಯನ್ನು ಮೂಡಿಸಲು ಸಾಧ್ಯ. ಆಗ ಸಮಾಜ ರಚನೆಯೊಳಗೆ ಇರುವ ವೈರುದ್ಧ್ಯಗಳ ನಡುವಣ ಶತ್ರುತ್ವವನ್ನು ಮರೆಮಾಚಲು ಸಾಧ್ಯವಾಗುತ್ತದೆ. ಕಳೆದ ಐದಾರು ದಶಕಗಳಿಂದ, ಜಾತಿ ವ್ಯವಸ್ಥೆಯ ಸ್ವರೂಪವನ್ನು ಗಮನಿಸಿದವರು ಈ ಸಮಾಜದ ಹಿರಿ ವೈರುದ್ಧ್ಯ ಇದೇ ಆಗಿದೆ ಎಂದು ಗುರುತಿಸಿದ್ದರು. ಈ ವಿಶ್ಲೇಷಣೆ ಸರಿಯೋ ತಪ್ಪೋ ಎಂಬುದು ಸದ್ಯ ಮುಖ್ಯವಲ್ಲ. ಆದರೆ ಇದರಿಂದ ಜಾತಿಗಳ ನಡುವೆ ಶ್ರೇಣೀಕರಣಕ್ಕಾಗಿ ಹೋರಾಟ ನಡೆಯುತ್ತಿದೆ ಎಂಬುದಂತೂ ನಿಜ. ಈಗ ಅಧಿಕಾರದ ಹಸ್ತಾಂತರ ಸನ್ನಿಹಿತವಾಗುತ್ತಿದೆ ಎಂಬ ಎಚ್ಚರಿಕೆಯ ಗಂಟೆ ಮೊಳಗ ತೊಡಗಿದೆ. ಇದನ್ನು ನಿವಾರಿಸಲು ಹೊರಗಿನ ಶತ್ರುವನ್ನು ಕಲ್ಪಿಸಿ ಮುಂದಿಡಲಾಗುತ್ತಿದೆ. ಇದರಿಂದ 'ನಾವೆಲ್ಲರೂ ಒಂದು' ಎಂಬ ಭಾವನೆಯನ್ನು ಗಟ್ಟಿಗೊಳಿಸಿ, ಯಾರೋ ಇದನ್ನು ಒಡೆಯಲು ಪ್ರಯತ್ನಿಸುತ್ತಿದ್ದಾರೆ ಎಂಬ ಭಯದ ವಾತಾವರಣವನ್ನು ಮೂಡಿಸುವುದು ಅಧಿಕಾರವುಳ್ಳವರ ಗುರಿಯಾಗಿದೆ.ಈಗ ಕಿರು ವೈರುದ್ಧ್ಯವನ್ನು ಮುಂಚೂಣಿಗೆ ತಂದು ಇರುವ ಶತ್ರುತ್ವ ಭಾವವನ್ನು ಮರೆಮಾಚುವುದೂ ಇಂತಹ ಚರ್ಚೆಗಳ ಗುರಿಯಾಗಿದೆ.

Tuesday, February 26, 2008

2007ನೇ ಸಾಲಿನ ಡಾ.ಎಲ್.ಬಸವರಾಜು ಪ್ರಶಸ್ತಿ

ಡಾ.ಎಲ್.ಬಸವರಾಜು ಪ್ರತಿಷ್ಠಾನ (ರಿ), ಕೋಲಾರ ಇವರ 2007ನೇ ಸಾಲಿನ ಡಾ.ಎಲ್.ಬಸವರಾಜು ಪ್ರಶಸ್ತಿಯನ್ನು ನಾದ ಗಾರುಡಿ ತಮಟೆ ವಾದಕ ಶ್ರೀಯುತ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪನವರಿಗೆ ನೀಡಲಾಯಿತು. ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆದಿಮ, ಜಿಂಕೆ ರಾಮಯ್ಯ ಜೀವತಾಣ, ತೇರಹಳ್ಳಿ ಬೆಟ್ಟ, ಕೋಲಾರ ಇವರ ಸಹಯೋಗದೊಂದಿಗೆ ಜಿಂಕೆ ರಾಮಯ್ಯ ಜೀವತಾಣದಲ್ಲಿ 21-2-2008ರಂದು ಏರ್ಪಡಿಸಲಾಗಿತ್ತು.

ಜಿಂಕೆ ರಾಮಯ್ಯ ಜೀವತಾಣದಲ್ಲಿ ಕಂಡ ಸೂರ್ಯಾಸ್ತ.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದ ಶ್ರೀಮತಿ ವಿಶಾಲಾಕ್ಷಿ ಬಸವರಾಜುವರು ಡಾ.ಎಲ್.ಬಸವರಾಜುರವರ `ಸೊನ್ನಲಾಪುರದ ಸಂತ ಸಿದ್ಧರಾಮನ ನಿಜವಚನಗಳು' ಕೃತಿಯನ್ನು ಬಿಡುಗಡೆ ಮಾಡಿದರು. ಆ ಕೃತಿಯ ಕುರಿತಾಗಿ ಪ್ರೊ.ಚಂದ್ರಶೇಖರ್ ನಂಗಲಿ ಮಾತನಾಡಿದರು.


ಶ್ರೀಯುತ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪನವರಿಗೆ ಪ್ರಶಸ್ತಿ ಪ್ರದಾನವನ್ನು ಖ್ಯಾತ ಚಿತ್ರ ಕಲಾವಿದ ಶ್ರೀ.ಕೆ.ಟಿ.ಶಿವಪ್ರಸಾದ್‌ರವರು ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಸಿ.ಎಲ್.ಗೌಡರವರು ವಹಿಸಿದ್ದರು. ಶ್ರೀ ರಾಮಲಿಂಗಪ್ಪ ಟಿ.ಬೇಗೂರ್‌ರವರು ಕಾರ್ಯಕ್ರಮ ನಿರ್ವಹಣೆ ಮಾಡಿದರು.


ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ನಂತರ ಆದಿಮ ಹುಣ್ಣಿಮೆ ಹಾಡು-20 ಕಾರ್ಯಕ್ರಮದ ಅಂಗವಾಗಿ `ನಾಗಮಂಡಲ' ನಾಟಕ ಪ್ರದರ್ಶನ ಏರ್ಪಡಿಸಲಾಗಿತ್ತು. ನಿರ್ದೇಶನ- ಮೈಕೋ ಚಂದ್ರು, ತಂಡ- ಅನಂತರಾಮ್ ಮತ್ತು ಗೆಳೆಯರು, ಮೈಕೋ.



ಫೋಟೋ ಮತ್ತು ವೀಡಿಯೋ: ಮಾಸ್ಟರ್ ಶಶಾಂಕ್ .ಆರ್.ಬಿ.

ನಾದ ಗಾರುಡಿ ಮುನಿವೆಂಕಟಪ್ಪನವರ ಪರಿಚಯ:


ನಾದ ಗಾರುಡಿ ಶ್ರೀಯುತ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪನವರು ಈಗಿನ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲ್ಲೂಕಿನ ಪಿಂಪಿಪಾಪನಹಳ್ಳಿಯ ಪಾಪಣ್ಣ-ಮುನಿಗಂಗಮ್ಮ ದಂಪತಿಗಳ ಸುಪುತ್ರರು. ಆ ಕಾಲದ ನೈಟ್ ಸ್ಕೂಲಿನಲ್ಲಿ ನಾಲ್ಕನೆಯ ತರಗತಿಯವರೆಗೆ ಮಾತ್ರ ವಿದ್ಯಾಭ್ಯಾಸ ಪಡೆದವರು. ತಂದೆ ಪಾಪಣ್ಣನವರು ತಮಟೆ ನುಡಿಸುವುದರಲ್ಲಿ ಹೆಸರಾದವರಾಗಿದ್ದರೂ ಅವರು ಬದುಕಿರುವವರೆಗೆ ಮುನಿವೆಂಕಟಪ್ಪನವರಿಗೆ ತಮಟೆ ಮುಟ್ಟಲು ಮನಸ್ಸಾಗಿರಲಿಲ್ಲ. ತಂದೆ ತೀರಿಕೊಂಡ ನಂತರ ಅದೂ ತಮ್ಮ ಹದಿನೇಳನೇ ವಯಸ್ಸಿನಲ್ಲಿ ತಮಟೆಯನ್ನು ಎದೆಗೇರಿಸಿದ್ದು ಹಾಗೂ ಎದೆ ದನಿಯನ್ನು ತಮಟೆ ದನಿಯಾಗಿಸಿದ್ದು. ಅಂದು ಎದೆಗೇರಿಸಿದ ತಮಟೆಯನ್ನು ಅವರು ಕೈಬಿಡಲಿಲ್ಲ; ತಮಟೆಯೂ ಅವರನ್ನು ಕೈಬಿಡಲಿಲ್ಲ.



ಮುನಿವೆಂಕಟಪ್ಪನವರ ತಮಟೆಯ ನಾದವನ್ನು ಕೇಳಿ, ನೋಡಿ ಆನಂದಿಸಿ.

ಒಂದು ಕಾಲಕ್ಕೆ ಆದಿ ರುದ್ರನ ಆವಿಷ್ಕಾರವಾದ ತಮಟೆ ಮನುಕುಲದ ಸಂಕಟ ಸಂಭ್ರಮಗಳನ್ನು ನಾದ ನುಡಿಯಾಗಿಸುತ್ತಾ ಗೌರವಾರ್ಹ ಸ್ಥಾನದಲ್ಲಿತ್ತು. ಕ್ರಮೇಣ ಮೇಲು ಕೀಳಿನ ಮುಸುಕಿನ ಮರೆಯ ಕೈವಾಡದಿಂದಾಗಿ ಕಡೆಗೆ ದೂಡಲ್ಪಟ್ಟಿತು. ಸಮಾಜದ ಕಣ್ಣಿಗೆ ಕೀಳಾಗಿ ಹೋದ ಈ ತಮಟೆಯ ಆದಿಮ ಪರಂಪರೆಗೆ ಗೌರವದ ಸ್ಥಾನವನ್ನು ಮರಳಿ ದಕ್ಕಿಸಿಕೊಡುತ್ತಾ ಆ ಪರಂಪರೆಯನ್ನು ಮುನ್ನಡೆಸುತ್ತಾ ತಮಟೆಯಂತೆಯೇ ಕಡೆಗಣಿಸಲಾಗಿದ್ದ ಸಾಮಾಜಿಕ ಸ್ತರದಿಂದ ತಾವೂ ಎತ್ತರಕ್ಕೆ ಏರಿದವರು. ಹೀಗೆ ಕಡೆಗಣಿಸಲಾದ ನೆಲಸಂಸ್ಕೃತಿಯ ಸಂಗೋಪನೆಗಾಗಿ ಅಮೋಘ ಕೊಡುಗೆ ನೀಡಿರುವ ಶ್ರೀ ಮುನಿವೆಂಕಟಪ್ಪ ನಮ್ಮ ನಡುವಿನ ಅಪರೂಪದ ಸಾಧಕರು.

ಇವರ ಸಾಧನೆಯ ಹಿರಿಮೆಗೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಇವರನ್ನು ಹುಡುಕಿಕೊಂಡು ಬಂದಿವೆ. ಇವುಗಳಲ್ಲಿ ಮುಖ್ಯವಾದವು ರಾಜ್ಯೋತ್ಸವ ಪ್ರಶಸ್ತಿ (1992), ಜನಪದ ಲೋಕ ಪ್ರಶಸ್ತಿ (2000), ಡಾ.ಜೀಶಂಪ ಜನಪದ ಕಲಾವಿದ ಪ್ರಶಸ್ತಿ (2008) ಹಾಗೂ ಡಾ. ಅಂಬೇಡ್ಕರ್ ಪ್ರಶಸ್ತಿ. ಇದಲ್ಲದೆ ದೂರದ ಜಪಾನ್ ದೇಶವೂ ಇವರನ್ನು ತಮ್ಮ ನಾಡಿಗೆ ಬರಮಾಡಿಕೊಂಡು ಇವರ ತಮಟೆಯ ಸೊಲ್ಲು ಕೇಳಿ ಅಲ್ಲಾಡಿಹೋಗಿದೆ.

ತಮಟೆ ವಾದನವನ್ನೂ ಧ್ಯಾನದ ಮಟ್ಟಕ್ಕೆ ಏರಿಸಿ ನಾದಮಯಗೊಳಿಸಿರುವ ಆ ಮೂಲಕ ನೆಲ ಸಂಸ್ಕೃತಿಯ ಸಂಗೋಪನಾ ಕಾಯಕ ಮುಂದುವರೆಸುತ್ತಾ ಬಂದಿರುವ ನಾದ ಕಾಯಕಿ ಮುನಿವೆಂಕಟಪ್ಪನವರು ತಮಟೆ ನುಡಿಸುವ ವೈಖರಿಗೆ ಅವರೇ ಸಾಟಿ. ಅವರ ತಮಟೆ ದನಿ ಕೇಳಿದರೆ ಸಾಕು ಕೇಳುವವರ ಮೈ ತುಂಬಾ ಮುಂಗಾರು ಮಿಂಚು ಸಾಲು. ತಮಟೆಯಲ್ಲಿ ನುಡಿಸಲಸಾಧ್ಯವಾದ ನುಡಿಗಳನ್ನು ನುಡಿಸುತ್ತಾ ತಾವೇ ಒಂದು ತಮಟೆಯಾದಂತೆ ಅವರ ಅಣುಅಣುವೂ ಕಣ ಕಣವೂ ನಾದವೇ, ರಕ್ತಪೂರ್ಣ ಸಂವೇದನೆಯ ವಸಂತವೇ. ಒಟ್ಟಾರೆ ತಮಟೆ ವಾದನಕ್ಕೂ ಹೊಸ ಶೈಲಿ, ನಾವೀನ್ಯ ತಂದುಕೊಟ್ಟಿರುವುದು ಮುನಿವೆಂಕಟಪ್ಪನವರ ಅಪ್ಪಟ ಕೌಶಲ್ಯಕ್ಕೊಂದು ಸಾಕ್ಷಿ. `ತಮಟೆ ನುಡಿಸುವಾಗ ದೇವರು ನಮ್ಮ ಸಪೋರ್ಟ್‌ಗಿರ್ತಾನೆ' ಎಂದು ನಂಬಿರುವ ಶ್ರೀಯುತರಿಗೆ ನಮ್ಮ ಈ ಪ್ರಶಸ್ತಿ ಅದಕ್ಕಿಂತ ಹೆಚ್ಚು ಸಂತೋಷ ಕೊಡಲಾರದು ಎಂದು ಭಾವಿಸುತ್ತಾ ಕರಗದಲ್ಲಿ ತಮಟೆ ಬಾರಿಸುವಾಗ ಸ್ವತಃ ಅವರು ಪಡುವಷ್ಟು ಆನಂದವನ್ನೇ ನಾವು ಅನುಭವಿಸುತ್ತಾ ನಮ್ಮ ಎಂದಿನ ಕರ್ತವ್ಯದ ಭಾಗವಾಗಿ 2007ನೇ ಸಾಲಿನ ಪ್ರತಿಷ್ಠಿತ ಡಾ.ಎಲ್.ಬಸವರಾಜು ಪ್ರಶಸ್ತಿಯನ್ನು ಅವರಿಗೆ ಸಲ್ಲಿಸುತ್ತಿದ್ದೇವೆ.

ಡಾ.ಎಲ್.ಬಸವರಾಜು ಈ ನಾಡು ಕಂಡ ಘನ ವಿದ್ವಾಂಸರಷ್ಟೇ ಅಲ್ಲದೆ ಅಲಕ್ಷಿತ ನುಡಿ ಪರಂಪರೆಗಳನ್ನು ಶೋಧಿಸಿ ಅವುಗಳಿಗೆ ಸಲ್ಲಬೇಕಾದ ಘನತೆಯ ಸ್ಥಾನವನ್ನು ಮರಳಿ ದಕ್ಕಿಸಿಕೊಡುತ್ತಿರುವ ಅಂತಃಕರಣಿಗಳು. ಇಂತಹ ಮಹನೀಯರ ಹೆಸರಿನಲ್ಲಿ ಕೊಡಮಾಡುತ್ತಾ ಬಂದಿರುವ ಈ ಪ್ರಶಸ್ತಿ ಮುನಿವೆಂಕಟಪ್ಪನವರ ತಮಟೆಯ ದನಿಯನ್ನು ಸದಾ ಮೊಳಗಿಸುತ್ತಿರಲಿ, ಆ ಮೂಲಕ ತಮಟೆಯ ನಾದಮಯತೆ ಮತ್ತಷ್ಟು ಗೌರವಾರ್ಹ ನೆಲೆಗಳಿಗೆ ಏರಲಿ. ಅವರ ಗರಡಿಯಲ್ಲಿ ನೂರಾರು ಕಲಾವಿದರು ಬೆಳೆದು ಬೆಳಗಲಿ, ತಮಟೆ ವಾದನದ ಸಮೂಹ ಹೆಚ್ಚು ಒಕ್ಕಲಾಗುತ್ತಲೇ ಇರುವಂತೆ ಮಾಡಲಿ ಎಂದು ಆಶಿಸುತ್ತೇವೆ.


Thursday, January 10, 2008

'ನಮ್ಮ ನಾಳೆ' ಶಿಬಿರದ ಫೋಟೋಗಳು

ಡಿಸೆಂಬರ್ 23ರಿಂದ 27ರವರೆಗೂ ಕೋಲಾರದ ಅಂತರಗಂಗೆ ಬೆಟ್ಟದ ಮೇಲಿನ ಕೋಟಗಾನಹಳ್ಳಿ ರಾಮಯ್ಯನ ಕನಸಿನ ಕೂಸಾದ 'ಆದಿಮ'ದಲ್ಲಿ ನಳಂದ ಮಂಟಪ ಏರ್ಪಡಿಸಿದ್ದ 'ನಮ್ಮ ನಾಳೆ' ಶಿಬಿರದ ಫೋಟೋಗಳು:


ಆದಿಮಕ್ಕೆ ಕಾಲಿಡುತ್ತಿರುವಂತೆ ಸ್ವಾಗತಿಸುವ ಬುದ್ಧ:


ಶಿಬಿರ ನಡೆದ ಸ್ಥಳ:



ಹೊಸದಾಗಿ ನಿರ್ಮಿತವಾಗಿರುವ ಕಲಾಮಂದಿರ:

ಶಿಬಿರದ ನಡುವಿನ ಬಿಡುವಿನಲ್ಲಿ ಬಿಸಿಲುಕಾಯಿಸಿಕೊಳ್ಳುತ್ತಿರುವುದು:




ನಡುವೆ ತೇರಳ್ಳಿಯ ದೇವಾಲಯಕ್ಕೆ ಭೇಟಿ:



ಸ್ಮೈಲ್ ಪ್ಲೀಸ್:



ದರ್ಗಾಕ್ಕೆ ಭೇಟಿ:


ಶಿಬಿರದಲ್ಲಿ ಭಾಗವಹಿಸಿದವರು:


ಆದಿಮದ ಕಲಾತಂಡ ನಮಗಾಗಿ ನೀಡಿದ 'ಕಿನ್ನರಿ ನುಡಿದೊ' ಅದ್ಭುತ ಪ್ರದರ್ಶನ:


Saturday, December 29, 2007

'ನಮ್ಮ ನಾಳೆ' ಶಿಬಿರದ ಡಾ.ಕೆ.ವಿ.ಎನ್.ರವರ ಟಿಪ್ಪಣಿಗಳು

ಈ ಶಿಬಿರ ಏಕೆ?

ಈ ಕಾಲ ಮಾಹಿತಿಗಳ ಕಾಲ. ಯಾವ ವಿಷಯ ಕುರಿತು ಬೇಕಾದರೂ ಸಾಕಷ್ಟು ಮಾಹಿತಿ ನಮಗೆ ದೊರಕುತ್ತದೆ. ಆದರೆ ಆ ಮಾಹಿತಿಯಲ್ಲಿ ಎಷ್ಟು ಬೇಕು ಎಷ್ಟು ಬೇಡ ಎಂಬುದನ್ನು ಗುರುತಿಸಿಕೊಳ್ಳುವುದು ಕಷ್ಟ. ಅಲ್ಲದೆ ದೊರಕುವ ಮಾಹಿತಿ ನಿಜವಾಗಿಯೂ ನಮಗೆ ಬೇಕೆ ಬೇಡವೇ ಎಂಬುದನ್ನು ಕೂಡ ತಿಳಿಯಲಾಗದೆ, ಒಂದೇ ಸಮನೆ ಹರಿದು ಬರುವ ಮಾಹಿತಿಗಳಿಗೆ ಕಣ್ಣು ಕಿವಿಗಳನ್ನು ತೆರೆದಿಟ್ಟು ಕೊಳ್ಳುವ ಒತ್ತಾಯಕ್ಕೆ ನಾವು ಒಳಗಾಗಿದ್ದೇವೆ. ಇದಲ್ಲದೆ ಹೀಗೆ ಮಾಹಿತಿಯ ದಾಳಿಗೆ ಒಳಗಾಗುವ ನಾವು ಯಾವಾಗಲೂ ಒಬ್ಬಂಟಿಯಾಗಿರುತ್ತೇವೆ. ಇನ್ನೊಬ್ಬರೊಡನೆ ಈ ಮಾಹಿತಿಯ ದಾಳಿಯ ಪರಿಣಾಮವನ್ನು ಹಂಚಿಕೊಳ್ಳಲೂ ಆಗದ ಇಕ್ಕಟ್ಟಿನಲ್ಲಿ ನಮ್ಮನ್ನು ಕಟ್ಟಿಹಾಕಲಾಗಿದೆ. ಈ ಇಕ್ಕಟ್ಟಿನಿಂದ ಹೊರಬರಲು ನಾವು ಈ ಶಿಬಿರವನ್ನು ಯೋಜಿಸಿದ್ದೇವೆ. ಇಲ್ಲಿ ತಿಳಿದುಕೊಳ್ಳುವುದಕ್ಕಿಂತ ಹೆಚ್ಚಾಗಿ, ನಮಗೇನು ತಿಳಿದಿದೆ, ತಿಳಿದಿರುವುದರಲ್ಲಿ ಬೇಕಾದ್ದು ,ಬೇಡವಾದ್ದು ಯಾವುದು ಎಂಬುದನ್ನು ಗುರುತು ಮಾಡಿಕೊಳ್ಳುವುದಕ್ಕೆ ಹೆಚ್ಚು ಗಮನಹರಿಸೋಣ.

ಏನು ಮಾಡುತ್ತೇವೆ?
ಕೆಲವು ದಿನ ಒಟ್ಟಾಗಿ ಇರುತ್ತೇವೆ. ಮಾತುಕತೆಯಾಡುತ್ತಾ ಒಬ್ಬರಿಗೊಬ್ಬರು ಕನ್ನಡಿಯೋ ದೀಪವೋ ಆಗುತ್ತಾ ಇರುತ್ತೇವೆ. ಈ ವೇಳೆಯಲ್ಲಿ ನಮಗೆ ಗೊತ್ತಿಲ್ಲದ್ದನ್ನು ತಿಳಿಯುತ್ತ, ಏನು ಗೊತ್ತೆಂಬುದನ್ನು ಅರಿಯುತ್ತ ಇರಬೇಕೆಂಬುದು ನಮ್ಮ ಗುರಿ. ಹಾಗಾಗಿ ಇರುವುದು ಮತ್ತು ಅರಿಯುವುದು ಎರಡಕ್ಕೂ ಇಲ್ಲಿ ಜಾಗವಿದೆ. ನೂರಾರು ಸಮಸ್ಯೆಗಳು ನಮ್ಮನ್ನು ಸುತ್ತುವರೆದಿವೆ. ಅಥವಾ ಅವುಗಳ ನಡುವೆ ನಾವು ಸೇರಿಕೊಂಡಿದ್ದೇವೆ. ಈ ಸಮಸ್ಯೆಗಳು ನಮಗೆ ಮಾತ್ರ ಸಂಬಂಧಪಟ್ಟಿರುವಂತಹುಗಳಲ್ಲ. ನಮ್ಮನ್ನೂ ಸೇರಿಸಿಕೊಂಡಂತೆ ಎಲ್ಲರನ್ನು ಸೇರಿಸಿಕೊಂಡಿವೆ. ಅವುಗಳ ಪರಿಹಾರಕ್ಕೆ ದಾರಿಗಳನ್ನು ಹಲವರು ಸೂಚಿಸಿದ್ದಾರೆ. ಸಮಸ್ಯೆಯನ್ನು ನಾವು ಯಾವ ಚೌಕಟ್ಟಿನಲ್ಲಿ ಅರಿಯುತ್ತೇವೆಯೋ ಅದಕ್ಕನುಗುಣವಾಗಿ ಪರಿಹಾರವೂ ಕಾಣತೊಡಗುತ್ತದೆ. ಅಂದರೆ ಪರಿಹಾರವನ್ನು ಅರಿಯುವ ಮೂಲಕ ಸಮಸ್ಯೆಯನ್ನು ನಾವು ಅರಿತಿರುವ ಚೌಕಟ್ಟನ್ನು ತಿಳಿಯುವುದು ಸಾಧ್ಯ. ಈ ಚೌಕಟ್ಟನ್ನು ಬದಲಿಸಿದರೆ ಬೇರೆ ಪರಿಹಾರವೂ ಕಾಣಬಹುದು. ಇದು ನಮ್ಮ ಹುಡುಕಾಟ.

ನಮ್ಮನಿಮ್ಮೆಲ್ಲರ ಹೊಣೆ ಏನು?
ಎಲ್ಲರದ್ದೂ ಸಮಾನ ಹೊಣೆಗಾರಿಕೆ. ಹೇಳುವವರು ಕೆಲವರು ಕೇಳುವವರು ಹಲವರು ಎಂಬ ನೆಲೆ ಇಲ್ಲಿ ಬೇಡ. ಏನು ಚರ್ಚಿಸ ಬೇಕು ಎಂಬುದನ್ನು ಎಲ್ಲರೂ ಕೂಡಿ ನಿರ್ಣಯಿಸುವುದು ಒಳಿತು. ಈ ಚರ್ಚೆಗಳ ಹರಹು ಎಷ್ಟಿರಬೇಕು ಎಂಬುದನ್ನು ಕೂಡ ಎಲ್ಲರೂ ಒಟ್ಟಾಗಿ ಗೊತ್ತು ಮಾಡೋಣ. ಇಲ್ಲದಿದ್ದರೆ ಎಲ್ಲವೂ ಜಾಳುಜಾಳಾಗಿ ಯಾರಿಗೂ ಕೆಲಸಕ್ಕೆ ಬಾರದಂತೆ ಸಮಯ ಕಳೆಯುತ್ತದೆ. ಏಕೆಂದರೆ ಯಾವುದೇ ವಿಷಯವನ್ನು ನಮಗೆ ಸಂಬಂಧಿಸಿದಂತೆ ಚರ್ಚಿಸಲು ಇರುವಷ್ಟೇ ಅವಕಾಶ ಅದರಿಂದ ನಮ್ಮನ್ನು ಹೊರಗಿಟ್ಟು ಚರ್ಚಿಸಲು ಕೂಡ ಇರುತ್ತದೆ. ಎರಡನೆಯ ಹಾದಿ ಸುಲಭವಾದದ್ದು. ಅಷ್ಟೇ ನಿರುಪಯುಕ್ತವಾದದ್ದು. ಈ ಮಾದರಿಯ ಚರ್ಚೆಗಳು ನಮಗೆ ಮಾಧ್ಯಮಗಳಲ್ಲಿ ದಂಡಿಯಾಗಿ ಕೇಳ ಸಿಗುತ್ತವೆ. ಇದನ್ನು ಬಿಟ್ಟು ನಮ್ಮನ್ನು ಒಳಗೊಳ್ಳುವ ಹಾದಿಯನ್ನು ಹಿಡಿಯಬೇಕೆಂಬುದು ನಮ್ಮ ಆಸೆ.

ಏನೆಲ್ಲ ವಿಷಯಗಳಿವೆ?
ಅಭಿವೃದ್ದಿಯ ಮಾದರಿಗಳು, ಸಂಸ್ಕೃತಿ ಕುರಿತ ಚಿಂತನೆಗಳು, ಧಾರ್ಮಿಕ ಮೂಲಭೂತವಾದ, ಪ್ರಜಾಪ್ರಭುತ್ವದ ಹೊಸ ವಿನ್ಯಾಸಗಳು, ಸಮಾಜ ರಚನೆಯಲ್ಲಿ ಆಗುತ್ತಿರುವ ಪಲ್ಲಟಗಳು. ತಿಳಿವಿನ ಹಲವು ಹಾದಿಗಳು. ನಮಗೆ ಪರಿಚಿತವಲ್ಲದ ಜೀವನ ವಿಧಾನಗಳು, ವಿಜ್ಞಾನದ ಸಾಮಾಜಿಕ ಹೊಣೆ, ಬುದ್ದಿಯ ಹೊಸ ಹೊಣೆಗಳು, ಭಾಷೆಯ ಬಗೆಗಿನ ಹೊಸ ತಿಳುವಳಿಕೆಗಳು ಹೀಗೆ ಹತ್ತಾರು ವಲಯಗಳಿವೆ. ಇವೆಲ್ಲವೂ ನಮ್ಮ ಚರ್ಚೆಯಲ್ಲಿ ಆಗಾಗ ಸುಳಿಯುತ್ತಲೇ ಹೋಗುತ್ತಿರುತ್ತವೆ. ಆದರೆ ಅವುಗಳನ್ನು ನಾವು ಬೇಕೆಂದ ರೀತಿಯಲ್ಲಿ ಕಟ್ಟಿಕೊಳ್ಳುವ ಯತ್ನಗಳನ್ನು ಈ ಶಿಬಿರದ ಅವಧಿಯಲ್ಲಿ ಮಾಡಬೇಕಿದೆ.

ಮೊದಲಿಗೆ ನಾವೇನು ಮಾಡಬೇಕು?
ನಾವು ಇಲ್ಲಿ ಚರ್ಚಿಸ ಬಹುದಾದ ವಿಷಯಗಳ ಪಟ್ಟಿಯೊಂದನ್ನು ಮಾಡೋಣ. ಆ ಪಟ್ಟಿಯಲ್ಲಿ ಆದ್ಯತೆಯ ಮೇರೆಗೆ ಐದು ವಿಷಯಗಳನ್ನು ಸೂಚಿಸೋಣ. ಹೆಚ್ಚು ವಿಷಯಗಳು ಬೇಡ. ಆ ವಿಷಯಗಳನ್ನು ಕುರಿತ ಮ್ಮ ಚಿಂತನೆಗಳನ್ನು ಪ್ರತಿ ವಿಷಯಕ್ಕೂ ಒಂದು ಪುಟಕ್ಕೆ ಮೀರದಂತೆ ಟಿಪ್ಪಣಿಯಲ್ಲಿ ದಾಖಲು ಮಾಡೋಣ. ಇವೆಲ್ಲವನ್ನು ಒಟ್ಟಾಗಿರಿಸಿಕೊಂಡು ಏನು ಮಾಡಬಹುದೆಂಬುದನ್ನು ಆಮೇಲೆ ಯೋಚಿಸೋಣ.

ನಾವೇನು ಮಾಡಬೇಕು?

ಪ್ರತಿ ದಿನವೂ ನಾಲ್ಕು ಅವಧಿಗಳಲ್ಲಿ ಸೇರೋಣ. ಆಗ ಒಂದೊಂದು ವಿಷಯವನ್ನು ಕುರಿತು ಮೊದಲು ಹತ್ತು ಹದಿನೈದು ನಿಮಿಷಗಳ ಕಾಲ ಮೊದಲ ಮಾತನ್ನು ಕೇಳಿಸಿಕೊಳ್ಳೋಣ. ಬಳಿಕ ಗುಂಪುಗಳಲ್ಲಿ ಅದೇ ವಿಷಯವನ್ನು ಕುರಿತು ಬೇರೆ ಬೇರೆ ನೆಲೆಗಳಲ್ಲಿ ಮತ್ತು ನಮ್ಮ ನಮ್ಮ ಅನುಭವ ಮತ್ತು ಓದಿನ ಹಿನ್ನೆಲೆಯಲ್ಲಿ ಮಾತಾಡಿಕೊಳ್ಳೋಣ. ಅಲ್ಲಿ ನಡೆದ ಮಾತುಕತೆಗಳನ್ನು ಆ ಗುಂಪಿನ ಯಾರಾದರೊಬ್ಬರು ಒಟ್ಟಾಗಿಸಿ ಎಲ್ಲರೆದುರು ಹೇಳಬೇಕು ಇಲ್ಲವೇ ಬರೆದು ಓದಬೇಕು.

ಒಂದು ಅವಧಿಯ ಮಾತುಕತೆಯ ಬಳಿಕ ಮುಂದಿನ ಅವಧಿಯ ಚರ್ಚೆಯ ವಿಷಯ ಅಲ್ಲಿಯೇ ಮೈ ತಳೆಯುತ್ತದೆ. ಒಂದಕ್ಕೊಂದು ಸಂಬಂಧವುಳ್ಳ ವಿಷಯಗಳ ಸರಣಿಯೊಂದನ್ನು ಒಟ್ಟಾಗಿ ರೂಪಿಸಿಕೊಳ್ಳೋಣ

ಮೊದಲು ನೆನಪು ಕುರಿತಂತೆ ಚರ್ಚೆ ಮೊದಲಾಗುತ್ತದೆ. ನೆನಪು ಹಲವು ನೆಲೆಗಳ:ನ್ನು ಹೊಂದಿದೆ. ಅದು ಸ್ವಂತದ್ದಾಗಿರಬಹುದು. ಅಲ್ಲದೆ ಸಾಂಸ್ಕೃತಿಕ ನೆನಪು, ಸಾಮಾಜಿಕ ನೆನಪು ಎಂಬ ಮಾತುಗಳೂ ಇವೆ. ನೆನಪಿಗೂ ಚರಿತ್ರೆಗೂ ಇರುವ ಸಂಬಂಧಗಳು ಇನ್ನೊಂದು ಚರ್ಚೆಯ ವಿಷಯ. ರಾಷ್ಟ್ರೀಯತೆಗೂ ಚರಿತ್ರೆಗೂ ಇರುವ ಸಂಬಂಧವನ್ನು ಚರ್ಚಿಸುತ್ತ ಮತ್ತೆ ನೆನಪುಗಳ ಪಾತ್ರವನ್ನು ಚರ್ಚಿಸುತ್ತೇವೆ. ನಮ್ಮ ಶ್ರೇಣೀಕೃತ ಸಮಾಜದಲ್ಲಿ ನೆನಪುಗಳಿಗೆ ಇರುವ ಮಹತ್ವವನ್ನು ಕುರಿತು ಮಾತಾಡಬೇಕು.
ನಮ್ಮ ಜಾನಪದ ಅಧ್ಯಯನಗಳು ರೂಪಿಸುತ್ತಿರುವ ಸಾಮುದಾಯಿಕ ಮತ್ತು ಸಾಮೂಹಿಕ ನೆನಪುಗಳ ಧನಾತ್ಮಕ ನೆಲೆಗಳೇನು ಎಂಬುದನ್ನು ಚರ್ಚಿಸಬೇಕಾಗಿದೆ.

ನಮ್ಮ ಇಂದಿನ ಹಲವು ಹಲವು ಕಾಳಜಿಗಳಲ್ಲಿ ತಾಳಿಕೆಯುಳ್ಳ ಬೆಳವಣಿಗೆ ಕೂಡ ಒಂದಾಗಿದೆ. ಇದನ್ನು ಜಾಗತೀಕರಣದ ಹಿನ್ನೆಲೆಯಲ್ಲಿ ವ್ಯಾಖ್ಯಾನಿಸಿಕೊಳ್ಳುವುದು ಒಂದು ಅಗತ್ಯ. ಸಿದ್ಧ ಚೌಕಟ್ಟುಗಳ ಮಿರಿಯನ್ನು ಗಮನಿಸುತ್ತ ಜಾಗತಿಕವಾಗಿ ಲಭಿಸುತ್ತಿರುವ ಚಿಂತನಾ ಮಾದರಿಗಳನ್ನು ಪರಿಶೀಲನೆಗೆ ತೆಗೆದುಕೊಳ್ಳಬೇಕಾಗಿದೆ.

ನಮ್ಮ ಸಮಕಾಲೀನ ಸಮಸ್ಯೆಗಳನ್ನು ಗುರುತಿಸಿಕೊಂದು ಅವುಗಳ ನಡುವೆ ಇರುವ ಸಂಬಂಧಗಳನ್ನು ಕುರಿತು ಚರ್ಚಿಸುವುದು ಇನ್ನೊಮದು ಜವಾಬ್ದಾರಿ. ನಾವೆಲ್ಲರೂ ಅಂತಹ ಸಮಸ್ಯೆಗಳ ಪಟ್ಟಿಯೊಂದನ್ನು ಮೊದಲು ತಯಾರಿಸಿಕೊಳ್ಳೋಣ. ಬಳಿಕ ಒಟ್ಟಾಗಿ ಕುಳಿತು ಅವುಗಳೊಡನೆ ಸಂವಾದವನ್ನು ಬೆಳೆಸೋಣ.

ಐದು ದಿನಗಳಲ್ಲಿ ಒಟ್ಟು ಹದಿನೆಂಟು ಅವಧಿಗಳು ನಮಗೆ ದೊರಕುವುದು ಸಾಧ್ಯ. ಅವುಗಳನ್ನು ಹೇಗೆ ಉಪಯೋಗಸಿಕೊಳ್ಳಬೇಕೆಂಬುದನ್ನು ಮೊದಲ ಅವಧಿಯಲ್ಲಿ ನಾವೇ ಚರ್ಚಿಸಿ ನಿರ್ಣಯಿಸಿಕೊಳ್ಳೋಣ. ಸಮಯ ಮತ್ತು ನಮ್ಮ ಸಾಧ್ಯತೆಗಳನ್ನು ಹೊಂದಿಸುವುದು ನಮ್ಮೆಲ್ಲರ ಗುರಿಯಾಗ ಬೇಕಲ್ಲವೇ?

ನೆನಪು ಮತ್ತು ಚರಿತ್ರೆ

ಚರಿತ್ರೆಯನ್ನು ಮರೆತವರು ಅದನ್ನು ಪುನರಾವರ್ತಿಸುವ ಶಾಪಕ್ಕೆ ಒಳಗಾಗುತ್ತಾರೆ ಎನ್ನುವುದು ಒಂದು ಹೆಸರಾಂತ ಹೇಳಿಕೆ. ಈ ಮಾತನ್ನು ಸಮರ್ಥಿಸಲು ಹತ್ತಾರು ಸಂಕಥನಗಳನ್ನು ನಮ್ಮೆದುರು ಮಂಡಿಸಲಾಗಿದೆ. ಆದರೆ ಇಪ್ಪತ್ತನೆಯ ಶತಮಾನದಲ್ಲಿ ನಡೆದದ್ದನ್ನು ಗಮನಿಸಿದ ಹಲವು ಚಿಂತಕರು ಈ ಹೇಳಿಕೆಯನ್ನು ಬದಲಿಸಬೇಕೆಂದು ಹೇಳುತ್ತಿದ್ದಾರೆ. ಅವರ ಪ್ರಕಾರ ಚರಿತ್ರೆಯನ್ನು ನೆನಪಿಟ್ಟುಕೊಳ್ಳುವವರು ಅದನ್ನು ಪುನರಾವರ್ತಿಸುವ ಶಾಪಕ್ಕೆ ಒಳಗಾಗುತ್ತಾರೆ. ಈ ಬದಲಾದ ಗ್ರಹಿಕೆಗೆ ಕಾರಣಗಳೇನು? ಕಳೆದ ಶತಮಾನದಲ್ಲಿ ಎರಡನೆಯ ಮಹಾಯುದ್ಧ ಮತ್ತು ಅನಂತರದ ಕೆಲವು ಸಂಘರ್ಷಗಳು ಜನಸಮುದಾಯದ ನೆನಪುಗಳನ್ನು ಕಟ್ಟಿಕೊಡುವ ಮತ್ತು ಆ ನೆನಪುಗಳಿಗೆ ಅವರನ್ನು ಹಕ್ಕುದಾರರನ್ನಾಗಿ ಮಾಡುವ ಮೂಲಕವೇ ಸಂಭವಿಸಿದವು. ಈಗಲೂ ಹೀಗೆ ಸಮುದಾಯದ ನೆನಪುಗಳನ್ನು ಉದ್ದೀಪಿಸುವ ಮತ್ತು ಆ ನೆನಪುಗಳನ್ನು ಆ ಸಮುದಾಯದ ಗುರುತುಗಳನ್ನಾಗಿ ಮಾಡುವ ಕೆಲಸ ಎಡೆಬಿಡದೆ ನಡೆಯುತ್ತಲೇ ಇದೆ. ಹೀಗಾಗಿ ನೆನಪುಗಳಿಗೂ ಚರಿತ್ರೆಗೂ ಇರುವ ಸಂಬಂಧವನ್ನು ಮರುಚಿಂತನೆಗೆ ಒಳಪಡಿಸ ಬೇಕಾಗಿದೆ.

ನೆನಪು ಎಂದರೇನು? ಆಗಿಹೋದದ್ದರ ಮರುಗಳಿಕೆಯೇ ನೆನಪು. ಎಲ್ಲ ಸಂಗತಿಗಳೂ ನಮ್ಮ ನೆನಪಿನಲ್ಲಿ ಉಳಿಯುವುದಿಲ್ಲ. ನಾವು ಮರೆಯುವುದು ಸಹಜ. ಏನನ್ನು ಮರೆಯುತ್ತೇವೆ ಮತ್ತು ಏನನ್ನು ನೆನಪಿನಲ್ಲಿ ಇಟ್ಟುಕೊಳ್ಳುತ್ತೇವೆ ಎಂಬುದು ನಮ್ಮ ಆಯ್ಕೆಯಲ್ಲ. ಇದನ್ನು ನಿರ್ಧರಿಸುವ ಸಂಗತಿಗಳು ಹಲವಿವೆ. ಕೆಲವು ಸಂಗತಿಗಳನ್ನು ಮರೆಯ ಬೇಕೆನ್ನುತ್ತೇವೆ;ಆದರೆ ಮರೆಯಲಾರೆವು. ಹಾಗೆಯೇ ಕೆಲವು ಸಂಗತಿಗಳನ್ನು ನೆನಪಿಡಬೇಕೆಂದು ಕೊಳ್ಳುತ್ತೇವೆ;ಆದರೆ ಸುಲಭವಾಗಿ ಮರೆತು ಬಿಡುತ್ತೇವೆ.
ಇದು ವ್ಯಕ್ತಿಯ ಸಮಸ್ಯೆ ಎಂದುಕೊಳ್ಳೋಣ. ವ್ಯಕ್ತಿಯಲ್ಲೂ ನೆನಪು ಏಕೆ ಅಗತ್ಯ? ಅದು ನಮ್ಮ ವರ್ತಮಾನಕ್ಕೆ ಏನನ್ನು ಒದಗಿಸುತ್ತದೆ? ಈ ಕುರಿತು ಚಿಂತನೆ ನಡೆಸಬೇಕಿದೆ.

ವ್ಯಕ್ತಿಗೆ ನೆನಪುಗಳಿರುವಂತೆ ಸಮುದಾಯಗಳಿಗೂ ನೆನಪು ಇರುವುದೇ? ಇದೆಯೆಂದು ಕೆಲವು ಚಿಂತನಾ ವಿಧಾನಗಳು ಹೇಳುತ್ತವೆ. ಈ ಸಾಮುದಾಯಿಕ ನೆನಪುಗಳು ಇರುತ್ತವೆಯೋ ಅಥವಾ ಅದು ಇದೆಯೆಂದು ನಾವು ತಿಳಿಯುತ್ತವೆಯೋ. ಅಂದರೆ ಸಮುದಾಯಗಳಿಗಾಗಿ ನೆನಪನ್ನು ಕಟ್ಟಿಕೊಡುವ ಕೆಲಸವನ್ನು ಬೇರೆ ಯಾರಾದರೂ ಉದ್ದೇಶಪೂರ್ವಕವಾಗಿ ಮಾಡಬೇಕಾಗುತ್ತದೆ. ಇದನ್ನೇ ಚರಿತ್ರೆ ಎಂದು ನಂಬಿಸಲಾಗುತ್ತದೆ. ಚರಿತ್ರೆ ಎಂದರೆ ಆಗಿಹೋಗಿದ್ದರ ಸಂಕಥನ ಎನ್ನುವ ವ್ಯಾಖ್ಯೆಯನ್ನು ಒಪ್ಪಿದರೆ ಈ ಸಂಕಥನ ಇರುವುದಿಲ್ಲ;ಅದನ್ನು ಕಟ್ಟಲಾಗುತ್ತದೆ ಎಂದೂ ಒಪ್ಪಬೇಕಾಗುತ್ತದೆ. ಆದ್ದರಿಂದ ಚರಿತ್ರೆ ಎನ್ನುವುದು ಸಮುದಾಯದ ನೆನಪಿನಿಂದ ಕಟ್ಟಿದ್ದು ಎನ್ನುವುದು ಎಷ್ಟು ದಿಟವೋ ಆ ನೆನಪುಗಳು ಸಮುದಾಯಕ್ಕೆ ಇವೆ ಎಂದು ನಂಬಿಸಲಾಗುತ್ತದೆ ಎನ್ನುವುದೂ ಅಷ್ಟೇ ನಿಜ.

ಸಮುದಾಯಗಳು ಚರಿತ್ರೆಯನ್ನು ಅವಲಂಬಿಸಿ ಬದುಕುವ ಅನಿವಾರ್‍ಯಕ್ಕೆ ಒಳಗಾಗಿವೆಯೇ? ಸಮುದಾಯಗಳನ್ನು ಒತ್ತಟ್ಟಿಗಿಡಲು ಇಂತಹ ಚರಿತ್ರೆಗಳು ಅಗತ್ಯವೇ? ಹತ್ತೊಂಬತ್ತನೆಯ ಶತಮಾನದಲ್ಲಿ ರಾಷ್ಟ್ರಗಳನ್ನು ವ್ಯಾಖ್ಯಾನಿಸುವಾಗ,ರಾಷ್ಟ್ರೀಯತೆಯನ್ನು ನಿರೂಪಿಸುವಾಗ ಸಮುದಾಯಗಳ ಗುರುತಾಗಿ ಚರಿತ್ರೆಯೊಂದು ಇರಬೇಕೆಂದು ಹೇಳಲಾಯಿತು. ಚರಿತ್ರೆಗಳಿಲ್ಲದ ಸಮುದಾಯಗಳಿಗೆ ರಾಷ್ಟ್ರವೆನಿಸಿಕೊಳ್ಳುವ ಅರ್ಹತೆ ಇದೆಯೇ ಎಂಬುದು ಕೂಡ ಒಂದು ಪ್ರಶ್ನೆಯಾಗಿತ್ತು. ಇದನ್ನು ಹಲವು ದಶಕಗಳ ಕಾಲ ಗಾಢವಾಗಿ ನಂಬಲಾಗಿತ್ತು. ನಂಬಬೇಕಾದ ಒತ್ತಾಯಗಳಿದ್ದವು. ವಸಾಹತು ಆಡಳಿತಗಳಿಂದ ಬಿಡುಗಡೆಯಾಗಲು ರಾಷ್ಟ್ರೀಯತೆಯ ಪರಿಕಲ್ಪನೆಯನ್ನು ರೂಢಿಸುವುದು ಅತ್ಯಗತ್ಯವಾಗಿತ್ತು. ಇದು ಕೇವಲ ಭಾವನಾತ್ಮಕ ಅಗತ್ಯವಷ್ಟೇ ಆಗಿರಲಿಲ್ಲ. ಆರ್ಥಿಕ ಮತ್ತು ಸಾಮಾಜಿಕ ಅಗತ್ಯಗಳೂ ಆಗ ಇದ್ದವು. ರಾಷ್ಟ್ರೀಯತೆಗೂ ಚರಿತ್ರೆಗೂ ಇರುವ ಸಂಬಂಧವನ್ನು ಮರು ಚಿಂತನೆಗೆ ಗುರಿಪಡಿಸುವ ಕಾಲ ಈಗ ಒದಗಿಬಂದಿದೆ.

ಸಾಮುದಾಯಿಕ ನೆನಪುಗಳನ್ನು ಸಾಂಸ್ಕೃತಿಕ ಮತ್ತು ಸಾಮಾಜಿಕ ನೆಲೆಯಲ್ಲಿಯೂ ವ್ಯಾಖ್ಯಾನಿಸಲಾಗುತ್ತದೆ. ಈ ನೆನಪುಗಳು ಸಮಾಜದ ಉಳಿಕೆ ಮತ್ತು ಮುಂದುವರಿಕೆಗೆ ಅಗತ್ಯವೆಂಬ ಚಿಂತನೆಗಳೂ ಇವೆ. ಅಲ್ಲದೆ ಸಂಸ್ಕೃತಿ ಎಂದರೆ ಸಂಚಯಿತ ನೆನಪುಗಳು ಎಂಬ ತಿಳುವಳಿಕೆಯೂ ಇದೆ. ಈ ಸಂಚಯಿತ ನೆನಪುಗಳನ್ನು ತಲೆಮಾರಿನಿಂದ ತಲೆಮಾರಿಗೆ ದಾಟಿಸುವ ಹಲವು ವ್ಯವಸ್ಥೆಗಳನ್ನೂ ಸಮುದಾಯಗಳು ರೂಪಿಸಿಕೊಂಡಿವೆ. ಈ ಸಂಚಯಿತ ನೆನಪುಗಳನ್ನು ಜೋಪಾನವಾಗಿ ಕಾಯ್ದಿರಿಸುವ ಮತ್ತು ಅದರ ಮಹತ್ವವನ್ನು ಗಟ್ಟಿಮಾಡುವ ಬಗೆಗಳನ್ನೂ ಕಟ್ಟಿಕೊಳ್ಳಲಾಗಿದೆ.

ಚರಿತ್ರೆ ನೆನಪಿನ ಪುನಾರಚನೆ ಎಂದೆವು. ಇದಕ್ಕೆ ಹಲವು ಆಕರಗಳನ್ನು ಹುಡುಕಿಕೊಳ್ಳಲಾಗಿದೆ. ಸಮುದಾಯದ ಸಂಚಯಿತ ನೆನಪುಗಳನ್ನು ಅಗೆದು ತೆಗೆಯಲು ಮೌಖಿಕ ಸಂಕಥನಗಳನ್ನು ನೆಮ್ಮುವುದು ಒಂದು ಬಗೆ. ಈ ಸಂಕಥನಗಳ ಮಾದರಿಗಳು ಹಲವು. ತಮ್ಮ ನೆನಪುಗಳನ್ನು ತಾವೇ ನಿರೂಪಿಸುವ ಬಗೆ ಒಂದಾದರೆ ತಮ್ಮ ಮೂಲಕ ಎಲ್ಲರ ನೆನಪುಗಳನ್ನು ದಾಟಿಸಲು ಯತ್ನಿಸುವ ಬಗೆ ಇನ್ನೊಂದು ಇವೆರಡೂ ಈಗ ಯಾವ ಪರಿಣಾಮವನ್ನು ಉಂಟುಮಾಡುತ್ತಿವೆ ಎನ್ನುವುದನ್ನು ಪರಿಶೀಲಿಸುವುದು ಈಗ ಅಗತ್ಯವಾಗಿದೆ.